ದೇವರ ಸರ್ವಾಧಿಕಾರಕ್ಕೆ ಸವಾಲ್!
by Nataraj Huliyar
ಈಸ್ಕಿಲಸ್ನ ‘ಪ್ರೊಮಿಥ್ಯೂಸ್ ಬೌಂಡ್’ ನಾಟಕ ನೆನಪಾದಾಗಲೆಲ್ಲ ಕನ್ನಡದ ಹಳೆಯ ಸಿನಿಮಾ ‘ದೇವರ ಗೆದ್ದ ಮಾನವ’ ನೆನಪಾಗುತ್ತಿತ್ತು. ಆ ಸಿನಿಮಾದ ಪೋಸ್ಟರ್ನಲ್ಲಿ ರಾಜ್ಕುಮಾರ್ ಫೋಟೊ ನೋಡಿದ ನೆನಪು. ಮೊನ್ನೆ ಕುತೂಹಲದಿಂದ ಯೂಟ್ಯೂಬಿನಲ್ಲಿ ಹತ್ತು ನಿಮಿಷ ಈ ಸಿನಿಮಾ ನೋಡಿದರೆ, ಅದು ಎಂದಿನಂತೆ ದೇವರು ಮನುಷ್ಯನನ್ನು ಪರಿವರ್ತಿಸುವ ಹಳಸಲು ಕತೆಯಂತೆಯೇ ಕಾಣತೊಡಗಿತು. ಇದರ ತಂಟೆಯೇ ಬೇಡವೆಂದು ದೇವರಿಗೆ ಸವಾಲೆಸೆದ ‘ಪ್ರೊಮಿಥ್ಯೂಸ್ ಬೌಂಡ್’ ನಾಟಕ ಓದಲು ಶುರು ಮಾಡಿದೆ. ಮತ್ತೆ ಈ ಹಿಂದೆ ಪ್ರೊಮಿಥ್ಯೂಸ್ ಕತೆ ಕೇಳಿದಾಗ ಹುಟ್ಟಿದ ಅದೇ ರೋಮಾಂಚನ! ಸ್ಯೂಸ್ ದೇವನಿಗೆ ಸವಾಲೆಸೆವ ಪ್ರೊಮಿಥ್ಯೂಸನ ಒಂದೊಂದು ಬಂಡಾಯದ ಡೈಲಾಗಿಗೂ ಅದೇ ಮುಗ್ಧ ಪುಳಕ!
‘ಪ್ರೊಮಿಥ್ಯೂಸ್ ಬೌಂಡ್’ ಎರಡೂವರೆ ಸಾವಿರ ವರ್ಷಗಳ ಕೆಳಗೆ ಹುಟ್ಟಿದ ಗ್ರೀಕ್ ನಾಟಕ. ಈ ನಾಟಕಕ್ಕೆ ಮೂಲವಾದ ಪುರಾಣವನ್ನು ಗ್ರೀಕ್ ಜಾನಪದ ಈ ಮೊದಲೇ ಸೃಷ್ಟಿಸಿತ್ತು. ಲೋಕದ ಶ್ರೇಷ್ಠ ಪ್ರಾಚೀನ ದುರಂತನಾಟಕಕಾರರಲ್ಲಿ ಮುಂಚೂಣಿಯಲ್ಲಿರುವ ಈಸ್ಕಿಲಸ್ ಬರೆದ ಪೂರ್ತಿ ನಾಟಕ ಸಿಕ್ಕಿಲ್ಲ. ಈಗ ಸಿಕ್ಕಿರುವ ನಾಟಕ ಭಾಗ ಇದ್ದಕ್ಕಿದ್ದಂತೆ ನಿಂತಂತಿದೆ. ಜಗತ್ತಿನ ಸಾಹಿತ್ಯ ಕೃತಿಗಳಲ್ಲಿ ನನ್ನ ಅತ್ಯಂತ ಪ್ರಿಯವಾದ ಪಾತ್ರಗಳಲ್ಲಿ ಒಬ್ಬನಾದ ಪ್ರೊಮಿಥ್ಯೂಸ್ ನಮ್ಮೆಲ್ಲರ ಒಳಗಿರುವ, ನಾವು ಅದುಮಿಡಬಯಸುವ, ಅದುಮಿಟ್ಟಿರುವ, ಅಕಸ್ಮಾತ್ ಹೊರ ಚೆಲ್ಲುವ ಒಬ್ಬ ಬಂಡುಕೋರ. ಪ್ರೊಮಿಥ್ಯೂಸ್ ಕಾರ್ಲ್ ಮಾರ್ಕ್ಸ್ಗೆ ಪ್ರಿಯವಾಗಿದ್ದ ಪಾತ್ರ ಎಂಬುದನ್ನು ಹಿಂದೊಮ್ಮೆ ಈ ಅಂಕಣದಲ್ಲಿ ಹೇಳಿರುವೆ.
ಪ್ರೊಮಿಥ್ಯೂಸ್ ಗ್ರೀಕ್ ದೇವತೆ. ಸ್ವತಂತ್ರ ಮನಸ್ಸಿನ ಬಂಡುಕೋರ. ಗ್ರೀಕ್ ಪುರಾಣಗಳಲ್ಲಿ ಭಾರತೀಯ ಪುರಾಣಗಳ ದೇವೇಂದ್ರನಂತೆ ‘ದೇವತೆಗಳ ಹೆಡ್ ಆಫ್ ದಿ ಡಿಪಾರ್ಟ್ಮೆಂಟ್’ ಆಗಿರುವ ದೇವತೆ ಸ್ಯೂಸ್. ಇಂದ್ರನ ಹಾಗೆಯೇ ಕಂಡ ಕಂಡ ಹೆಣ್ಣುಗಳ ಮೇಲೆ ಕಣ್ಣು ಹಾಕುವವನು! ಪ್ರೊಮಿಥ್ಯೂಸ್ ಸ್ಯೂಸನ ಸರ್ವಾಧಿಕಾರಕ್ಕೆ ಕೇರ್ ಮಾಡುವವನಲ್ಲ. ಮಾನವಜೀವಿಗಳನ್ನು ಕಂಡರೆ ಪ್ರೀತಿ, ಕಾಳಜಿಯುಳ್ಳ ಪ್ರೊಮಿಥ್ಯೂಸ್ಗೆ ಮಾನವರ ಸಹಾಯಕ್ಕೆ ಧಾವಿಸುವುದು ಪ್ರಿಯವಾದ ಕೆಲಸ. ಆದರೆ ‘ಮಾನವರಿಗೆ ಸವಲತ್ತು ಕೊಟ್ಟರೆ ಅವರು ದೇವರಿಗೆ ವಿಧೇಯರಾಗಿರುವುದಿಲ್ಲ; ತಮಗೆ ಪೂಜೆ ಮಾಡುವುದಿಲ್ಲ’ ಎಂಬುದು ಸ್ಯೂಸ್ ಹಾಗೂ ಇನ್ನಿತರ ದೇವತೆಗಳ ಧೋರಣೆ.
ಇದೇ ಧೋರಣೆಯನ್ನು ಲೋಕದ ಲಕ್ಷಾಂತರ ಸಾಮಾಜಿಕ- ರಾಜಕೀಯ ನಾಯಕರುಗಳು ಕೂಡ ಅನುಸರಿಸುತ್ತಾ ಬಂದಿದ್ದಾರೆ! ಅಂದರೆ, ಮಾನವರನ್ನು ಕುರಿತ ಈ ಉಪೇಕ್ಷೆಗೆ ದೈವ ಪ್ರೇರಣೆಯೂ ಇದ್ದಂತಿದೆ! ‘ಮಾನವರಿಗೆ ಸಹಾಯ ಮಾಡಕೂಡದು’ ಎಂದು ಸ್ಯೂಸ್ ಪ್ರೊಮಿಥ್ಯೂಸ್ಗೆ ಆಜ್ಞೆ ಮಾಡುತ್ತಾನೆ. ಆದರೆ ಮಾನವರಿಗೆ ಸಹಾಯ ಮಾಡಲು ಪ್ರೊಮಿಥ್ಯೂಸ್ ಬಳ್ಳಿಯ ಕಾಂಡದಲ್ಲಿ ಬೆಂಕಿ ಬಚ್ಟಿಟ್ಟುಕೊಂಡು ಬಂದು ಮಾನವರಿಗೆ ಕೊಡುತ್ತಾನೆ. ಬೆಂಕಿ ಮಾನವರ ಪ್ರಗತಿಯ ಹಾದಿ ತೆರೆಯುತ್ತದೆ. ಮಾನವರಿಗೆ ಸಹಾಯ ಮಾಡಿದ್ದಕ್ಕಾಗಿ ಸ್ಯೂಸ್ ಪ್ರೊಮಿಥ್ಯೂಸನಿಗೆ ಕ್ರೂರ ಶಿಕ್ಷೆಯನ್ನು ಆದೇಶಿಸುತ್ತಾನೆ. ಸ್ಯೂಸನ ಅಂತ್ಯ ಯಾರಿಂದ ಆಗುತ್ತದೆ ಎಂಬ ಗುಟ್ಟು ಪ್ರೊಮಿಥ್ಯೂಸ್ಗೆ ತಿಳಿದಿದೆ; ಅವನನ್ನು ಹಿಂಸಿಸಿ ಅವನ ಬಾಯಿ ಬಿಡಿಸಬೇಕು ಎಂಬ ಸ್ಯೂಸನ ಕಿಡಿಗೇಡಿ ಸ್ವಾರ್ಥದಿಂದ ಕೂಡ ಈ ಶಿಕ್ಷೆ ಘೋಷಣೆಯಾಗಿದೆ.
‘ಪ್ರೊಮಿಥ್ಯೂಸ್ ಬೌಂಡ್’ ನಾಟಕದ ಆರಂಭದಲ್ಲಿ ಸ್ಯೂಸನ ಆಜ್ಞೆಯಂತೆ ಪ್ರೊಮಿಥ್ಯೂಸನನ್ನು ಮರುಭೂಮಿಯಲ್ಲಿ ಕೋಡುಗಲ್ಲಿಗೆ ಕಟ್ಟಿಹಾಕಲು ಬಂದಿರುವ ಇಬ್ಬರು ದೂತರಲ್ಲಿ ಒಬ್ಬ ‘ಸ್ಯೂಸ್ ಮನಸ್ಸು ಬದಲಿಸಬಹುದೆ?’ ಎಂದು ಕೇಳುತ್ತಾನೆ.
ಅದಕ್ಕೆ ಮತ್ತೊಬ್ಬನ ಉತ್ತರ:
‘ಸ್ಯೂಸನ ಮನ ಬದಲಾಗುವ ಮಾತೇ ಇಲ್ಲ
ಹೊಸದಾಗಿ ಅಧಿಕಾರ ಪಡೆದವರ ಆಳ್ವಿಕೆಯಲ್ಲಿ ಹೃದಯವೆಂಬುದೇ ಇಲ್ಲ.’
ಇನ್ನು ಮುಂದೆ ತಾನು ಸಾವಿರ ವರ್ಷ ಇಲ್ಲೇ ಕೊಳೆಯಬೇಕು ಎಂಬ ಬೆದರಿಕೆ-ವಾಸ್ತವ ಎದುರಿಗಿದ್ದರೂ ಪ್ರೊಮಿಥ್ಯೂಸ್ಗೆ, ತಾನು ಮನುಷ್ಯನಿಗೆ ನಾಗರಿಕತೆಯ ಮೂಲವಾದ ಬೆಂಕಿ ಕೊಟ್ಟವನು; ಎಲ್ಲ ಕಲೆಗಳನ್ನೂ ಕಲಿಸಿಕೊಟ್ಟವನು ಎಂಬ ಸಾರ್ಥಕ ಭಾವ ಹಾಗೇ ಇದೆ. ‘ಸ್ಯೂಸನ ರಾಜ್ಯಭಾರಕ್ಕೆ ಕೊನೆ ಎಂಬುದೇ ಇಲ್ಲ, ಸ್ಯೂಸನಿಗೆ ಶರಣಾಗು’ ಎಂದು ಮೇಳದ ಮಂದಿ ಪ್ರೊಮಿಥ್ಯೂಸನಿಗೆ ಕಿವಿಮಾತು ಹೇಳುತ್ತಾರೆ. ದೇವರ ಸರ್ವಾಧಿಕಾರಕ್ಕೂ ಅಂತ್ಯವಿದೆ ಎನ್ನುತ್ತಾನೆ ಪ್ರೊಮಿಥ್ಯೂಸ್. ಸ್ಯೂಸನ ಸಕಲ ಶಸ್ತ್ರಾಸ್ತ್ರಗಳು ಒಟ್ಟಾದರೂ ಅವನ ನಾಚಿಕೆಗೇಡಿ ಅಂತ್ಯವನ್ನು, ಕೊನೆಯಿಲ್ಲದ ಪತನವನ್ನು ತಡೆಯಲಾರವು. ಇದು ಸ್ಯೂಸನಿಗೆ ಹುಟ್ಟಿದ ಮಗುವೇ ಅವನನ್ನು ಮುಗಿಸುತ್ತದೆಂಬ ಗುಟ್ಟು ಬಲ್ಲ ಪ್ರೊಮಿಥ್ಯೂಸನ ಖಚಿತ ನಂಬಿಕೆ. ಆದ್ದರಿಂದ ಅವನು ಎಲ್ಲದಕ್ಕೂ ಸಿದ್ಧ; ಸ್ಯೂಸನನ್ನು ಎದುರಿಸಲು ಬದ್ಧ.
ಕೊನೆಗೆ, ಸ್ಯೂಸನ ಸಂದೇಶ ತರುವ ಹರ್ಮಿಸ್, ‘ಸ್ಯೂಸನನ್ನು ಕೊನೆಗಾಣಿಸುವ ಮಗು ಯಾರು ಹೇಳಿಬಿಡು. ನಿನ್ನ ಪ್ರಾಣ ಉಳಿಸಿಕೊ’ ಎಂದು ಬುದ್ಧಿ ಹೇಳುತ್ತಾನೆ. ‘ಸ್ಯೂಸ್ ನಿರ್ದಯ. ಅವನಿಗೆ ‘ಅಯ್ಯೋ’ ಎಂಬ ಪದವೇ ಗೊತ್ತಿಲ್ಲ’ ಎಂದು ಎಚ್ಚರಿಸುತ್ತಾನೆ. ಆದರೆ ಪ್ರೊಮಿಥ್ಯೂಸ್ ‘ಕಾಲ ಎಲ್ಲವನ್ನೂ ಕಲಿಸುತ್ತದೆ’ ಎಂದು ದೃಢವಾಗಿ ಹೇಳುತ್ತಾನೆ. ನನ್ನ ಎದೆಯಲ್ಲಿರುವ ಗುಟ್ಟನ್ನು ಅವನಿಗೆ ಹೇಳಲು ‘ನಾನೇನು ಅವನ ಸಾಲಗಾರನೆ?’ ಎಂದು ಸವಾಲೆಸೆಯುತ್ತಾನೆ. ‘ಬೇಡಾ ನೋಡು, ಸ್ಯೂಸ್ ತನ್ನ ಸಿಡಿಲಿನಿಂದ ನಿನಗೆ ಬಾರಿಸುತ್ತಾನೆ. ಅವನ ಹದ್ದು ಬಂದು ನಿನ್ನ ಮೈಯ ಖಂಡಖಂಡಗಳನ್ನು ಕುಕ್ಕುತ್ತಲೇ ಇರುತ್ತದೆ’ ಎಂದು ಹರ್ಮಿಸ್ ಎಚ್ಚರಿಸುತ್ತಾನೆ.
ಅದಕ್ಕೆ ಪ್ರೊಮಿಥ್ಯೂಸನ ಉತ್ತರ:
ನಾನವನ ಶತ್ರು ಅವನು ನನಗೆ ಶತ್ರು
ಅವನ ಮಿಂಚಿನ ಕವಲುಗಳು ಮಿಂಚಲಿ
ಅವನ ಸ್ವರ್ಗದಿಂದ ಎರಗುವ ಸೀಳುವ ಸಿಡಿಲುಗಳು ನನ್ನ ಸೀಳಲಿ
ಭೀಕರ ಬಿರುಗಾಳಿ ಬೀಸಿ ಬರಲಿ, ಭೂಮಿಯ ತಳವೇ ಅಳ್ಳಾಡಲಿ
ರೊಚ್ಚಿಗೆದ್ದ ಅಲೆಗಳು ಮೇಲೇರಿ ತಾರೆಗಳ ತೋಯಿಸಲಿ
ನನ್ನ ಈ ಅಸಹಾಯಕ ಮೈ ರಸಾತಳಕ್ಕೆ ಎಸೆಯಲ್ಪಡಲಿ.
ಅಷ್ಟೇ!
ಅಲ್ಲಿಗೆ ಅವನ ಶಕ್ತಿ ಕೊನೆಯಾಗುತ್ತದೆ.
ನಾನಂತೂ ಸಾಯುವುದಿಲ್ಲ.
ಪ್ರೊಮಿಥ್ಯೂಸನನ್ನು ಬಗ್ಗಿಸಲಾಗದೆ ಹರ್ಮಿಸ್ ಹೊರಡುತ್ತಾನೆ. ಭೂಮಿ ಗರಗರ ತಿರುಗುತ್ತದೆ. ಸ್ವರ್ಗದಿಂದ ಸಿಡಿಲು ಎರಗುತ್ತದೆ. ದಶದಿಕ್ಕುಗಳಿಂದಲೂ ಗಾಳಿ ಮೊರೆಯುತ್ತದೆ. ಇವೆಲ್ಲವನ್ನೂ ನೋಡುವ ಪ್ರೊಮಿಥ್ಯೂಸ್ ತನ್ನ ಮೇಲೆರಗುವ ಶಕ್ತಿಗಳನ್ನು ನೋಡನೋಡುತ್ತಾ ಹೇಳುತ್ತಾನೆ: ‘ಓ ಪವಿತ್ರ ಮಾತೆಯೇ, ನೋಡು ನೋಡು! ಓ ಬೆಳಕಿನ ದೇವತೆಯೇ ನೋಡಲ್ಲಿ- ನ್ಯಾಯವನ್ನು ಅಧಿಕಾರ ಶಕ್ತಿ ನುಂಗಲು ಬರುತ್ತಿದೆ...’
ನಾಟಕ ಇದ್ದಕ್ಕಿದ್ದಂತೆ ಇಲ್ಲಿಗೆ ಕೊನೆಯಾಗುತ್ತದೆ. ಇದರಾಚೆಗೂ ನಾಟಕ ಇದ್ದಂತಿದೆ; ಆದರೆ ಆ ಪುಟಗಳು ಸಿಕ್ಕಿಲ್ಲ. ಆದರೆ ಕೆಲವೇ ಪುಟಗಳಲ್ಲಿ ಈ ನಾಟಕ ದೇವರ ಸರ್ವಾಧಿಕಾರದ ವಿರುದ್ಧ ಪ್ರೊಮಿಥ್ಯೂಸನ ಬಂಡಾಯದ ರೋಮಾಂಚಕ ಕತೆ ಹೇಳುತ್ತದೆ; ತನ್ನ ಕಾಲದ ರಾಜರ ಸರ್ವಾಧಿಕಾರದ ವಿರುದ್ಧದ ಬಂಡಾಯವನ್ನೂ, ಎಲ್ಲ ಕಾಲದಲ್ಲೂ ಸರ್ವಾಧಿಕಾರಗಳಿಗೆ ಮಣಿಯದ ಮಾನವನ ಅದಮ್ಯ ಚೈತನ್ಯವನ್ನೂ ಬಿಂಬಿಸುತ್ತದೆ.
ಈಸ್ಕಿಲಸ್ನ ನಾಟಕಗಳ ಸಂಪುಟಕ್ಕೆ ಮುನ್ನುಡಿ ಬರೆದ ಸಂಪಾದಕನೊಬ್ಬ ‘ದೈವಭಕ್ತ ಈಸ್ಕಿಲಸ್ ಈ ದೈವವಿರೋಧದ ನಾಟಕವನ್ನು ಹೇಗೆ ಬರೆದ!’ ಎಂದು ಅಚ್ಚರಿಪಡುತ್ತಾನೆ. ಪರವಾಯಿಲ್ಲ! ಕೃತಿಯ ವಸ್ತು-ವಸ್ತುವಿನ್ಯಾಸಕ್ಕೂ, ಲೇಖಕರಿಗೂ ಊಹೆಯ ಸಂಬಂಧ ಕಲ್ಪಿಸಿ ಬರೆಯುವುದು ತಪ್ಪು ಎಂಬ ನಿಟ್ಟಿನಲ್ಲಿ ಆಧುನಿಕ ವಿಮರ್ಶೆ ಹಲವು ಪಾಠಗಳನ್ನು ಕಲಿಸಿದ್ದರೂ, ಭಾರತದಂತೆಯೇ ಪಶ್ಚಿಮದಲ್ಲೂ ಹೀಗೆ ಸೋಮಾರಿ ಊಹೆಗಳನ್ನು ಮಾಡುವ ದಡ್ಡ ಸಂಪಾದಕರು, ದಡ್ಡ ವಿಮರ್ಶಕರು ಇದ್ದೇ ಇರುತ್ತಾರೆ!
ಇಲ್ಲಿ ನೆನಪಿಡಬೇಕಾದ ಮಾತು: ಲೇಖಕಿ ಅಥವಾ ಲೇಖಕ ಎರಡೂವರೆ ಸಾವಿರ ವರ್ಷದ ಹಿಂದೆಯೇ ಬರೆಯಲಿ, ಇಪ್ಪತ್ತೊಂದನೆಯ ಶತಮಾನದಲ್ಲೇ ಬರೆಯಲಿ, ಅವರು ತಮ್ಮ ಚರ್ಮ ಮೀರಿ ಬರೆದಾಗ ಮಾತ್ರ, ತಮ್ಮ ಮೇಲೆ ಹೇರಲಾದ ಪರಂಪರಾಗತ ನಂಬಿಕೆಗಳ ಸರ್ವಾಧಿಕಾರವನ್ನು ಮೀರಿ, ಪ್ರಶ್ನಿಸಿ ಬರೆದಾಗ ಮಾತ್ರ ಸ್ವತಂತ್ರ ಬರವಣಿಗೆ ಹುಟ್ಟುವುದು! ಅದು ದೈವ ಸರ್ವಾಧಿಕಾರವಿರಲಿ, ದೇಶದ ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರದೇ ಸರ್ವಾಧಿಕಾರವಿರಲಿ, ಕೊನೇ ಪಕ್ಷ ಲೇಖಕನಿಗೆ, ಲೇಖಕಿಗೆ ತನ್ನ ಮನದಾಳದಲ್ಲಾದರೂ ಅದಕ್ಕೆ ವಿರೋಧವಿರದಿದ್ದರೆ ನಿಜವಾದ ಬರವಣಿಗೆ ಹೇಗೆ ಹುಟ್ಟೀತು? ನಾಟಕಕಾರ ಅಥವಾ ಲೇಖಕಿ ತನ್ನ ಕಾಲದ ಜಡ-ಸಿದ್ಧ, ಜನಜನಿತ ನಂಬಿಕೆಗಳನ್ನು ಮೀರಿ ಬರೆದರೆ ತಾನೇ ಸತ್ಯಶೋಧಕರಾಗುವುದು! ಪಿತೃ ಸರ್ವಾಧಿಕಾರವನ್ನು ವಿರೋಧಿಸುವ ಸ್ತ್ರೀವಾದಿಗೆ ದೈವ ಸರ್ವಾಧಿಕಾರದ ಬಗ್ಗೆ ವಿರೋಧವಿರದಿದ್ದರೆ ಸ್ವತಂತ್ರ ಸ್ತ್ರೀಪ್ರಜ್ಞೆ ಎಲ್ಲಿಂದ ಹುಟ್ಟೀತು? ಧಾರ್ಮಿಕ ಲೋಕದಲ್ಲಿರುವುದೂ ಪುರುಷ ದೈವದ ಸರ್ವಾಧಿಕಾರದ ಅಬ್ಬರವೇ ತಾನೆ!
ಹೀಗೆ ದೇವರ ಸರ್ವಾಧಿಕಾರವನ್ನು, ದುರಂತ ನಾಟಕಗಳಲ್ಲಿ ರಾಜರ ಹಮ್ಮು, ಬಿಮ್ಮು, ಪತನ, ದುರಂತಗಳ ಕತೆಯನ್ನು; ವಿನೋದ ನಾಟಕಗಳಲ್ಲಿ ರಾಜರ ಕೊಬ್ಬಿನ ಅಣಕವನ್ನು ಮಾಡಿದ ಗ್ರೀಕ್ ನಾಟಕಕಾರರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತತೊಡಗಿದ್ದರು. ದೇವರ ವಿರುದ್ಧದ ಬಂಡಾಯಕ್ಕೂ, ಪ್ರತ್ಯಕ್ಷ ದೇವತೆಗಳೆಂದು ಮೆರೆಯುತ್ತಿದ್ದ ರಾಜರ ವಿರುದ್ಧ ಬಂಡಾಯಕ್ಕೂ, ಪಶ್ಚಿಮದ ಡೆಮಾಕ್ರೆಸಿಯ ಹುಟ್ಟಿಗೂ ಸಂಬಂಧವಿದೆ. ಅಂದರೆ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಂತಾಗಿ ಯಾವುದೇ ಬಗೆಯ ಅಥಾರಿಟಿಯನ್ನು ಪ್ರಶ್ನಿಸುವ ಬಂಡಾಯಕ್ಕೂ, ಡೆಮಾಕ್ರೆಸಿಯ ಹುಟ್ಟಿಗೂ ಸಂಬಂಧವಿದೆ. ಚರಿತ್ರೆಯ ಈ ಮಹತ್ವದ ತಿರುವುಗಳನ್ನು, ಸತ್ಯಗಳನ್ನು, ಮೈಲಿಗಲ್ಲುಗಳನ್ನು ನಾವು ಮರೆಯಬಾರದು.
ಗ್ರೀಕ್ ದುರಂತ ನಾಟಕಗಳು ದೇವರ, ರಾಜರ ಕತೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಹೇಳುತ್ತಾ, ವಿಧಿಯ ಕೈವಾಡ ಸೂಚಿಸುತ್ತಿದ್ದರೂ, ಜನರ ವಿವೇಚನೆಯನ್ನು ಬಡಿದೆಬ್ಬಿಸುವ ಪ್ರಶ್ನೆಗಳನ್ನು ಸೃಷ್ಟಿಸುತ್ತಿದ್ದವು. ಈ ಥರದ ಪ್ರಾಚೀನ ನಾಟಕಗಳಿಗೂ ಧಾರ್ಮಿಕ ಕತೆಗಳ ಮೂಲಕ ಜನರನ್ನು ಮಾನಸಿಕ ಗುಲಾಮಗಿರಿಗೆ ತಳ್ಳಿದ ಪ್ರಾಚೀನ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ. ಅಂಬೇಡ್ಕರ್, ಪೆರಿಯಾರ್ ಈ ಅಂಶಗಳನ್ನು ಖಚಿತವಾಗಿ ಗುರುತಿಸಿ ವೈಚಾರಿಕತೆಯ ಘಟ್ಟವನ್ನು ಉದ್ಘಾಟಿಸಿದರು. ಈಚಿನ ವರ್ಷಗಳ ಕನ್ನಡ ಸಾಹಿತ್ಯ ಹಾಗೂ ಸಾಹಿತ್ಯಾಧ್ಯಯನಗಳ ಕೆಲವು ಧಾರೆಗಳು ಹಿಮ್ಮುಖಿಯಾಗಿ ಚಲಿಸುತ್ತಾ ಜನಪದ ದೇವತೆಗಳು, ಸುಡುಗಾಡು ಸಿದ್ಧರ ಕೀರ್ತನೆಯಲ್ಲಿ ತೊಡಗಿ ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದ ಅಷ್ಟಿಷ್ಟು ವೈಚಾರಿಕತೆಯನ್ನೂ ಹಿನ್ನೆಲೆಗೆ ಸರಿಸತೊಡಗಿವೆ ಎಂದು ನನಗನ್ನಿಸುತ್ತಿದೆ.
ಪ್ರೊಮಿಥ್ಯೂಸ್ ಕತೆ ಈ ಥರದ ಪ್ರಶ್ನೆಗಳನ್ನು ಮೂಡಿಸುತ್ತದೆ. ಕ್ಯಾಪಿಟಲಿಸಂ ಹಾಗೂ ಜಮೀನ್ದಾರಿ ಪ್ರವೃತ್ತಿಗಳ ಅಥಾರಿಟಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ವಿರೋಧಿಸಿದ ಮಾರ್ಕ್ಸ್ಗೆ, ಎಂಥ ಅಪಾಯ ಎದುರಾದರೂ ಅಸಹಾಯಕ ಮಾನವರ ನೆರವಿಗೆ ಬರುವ ಧೀಮಂತ ಪ್ರೊಮಿಥ್ಯೂಸನ ಕಾಳಜಿ ಪ್ರಿಯವಾಗಿದ್ದಂತಿತ್ತು; ಪ್ರೊಮಿಥ್ಯೂಸ್ ದೈವದ ಸರ್ವಾಧಿಕಾರವನ್ನು ವಿರೋಧಿಸಿದ್ದ ಅಂಶ ಕೂಡ ನಾಸ್ತಿಕ ಮಾರ್ಕ್ಸ್ಗೆ ಪ್ರಿಯವಾಗಿರಬಹುದು. ಮಾರ್ಕ್ಸ್ನನ್ನು ಪ್ರೊಮೀಥಿಯಸ್ ಆಗಿ ತೋರಿಸುವ ೧೮೪೩ರ ಪೇಂಟಿಂಗ್ ಮಾರ್ಕ್ಸ್ನಲ್ಲಿ ಕೂಡ ಪ್ರೊಮೀಥಿಯಸ್ ಎಳೆ ಇತ್ತು ಎಂಬುದನ್ನು ಒಡೆದು ಹೇಳುತ್ತದೆ.
ಈ ಟಿಪ್ಪಣಿ ಬರೆಯುತ್ತಿರುವಾಗ ನನ್ನ ಹದಿಹರೆಯದಲ್ಲಿ ನಮ್ಮೂರಿನ ಬಳಿಯ ಕೆಂಕೆರೆ ಎಂಬ ಪುಟ್ಟ ಊರಿನ ಲೈಬ್ರರಿಯಲ್ಲಿ ’ಪ್ರೊಮಿಥ್ಯೂಸ್ ಬೌಂಡ್’ ನಾಟಕದ ಅನುವಾದ ‘ಬದ್ಧ ಪ್ರೊಮಿಥ್ಯೂಸ್’ ಎಂಬ ಪುಸ್ತಕ ನೋಡಿದ್ದು ನೆನಪಾಯಿತು. ಅದರ ಶೀರ್ಷಿಕೆ ಮನಸ್ಸಿಗೆ ಹಿಡಿಯದೆ ಅದನ್ನು ಆಗ ಓದಿರಲಿಲ್ಲವೇನೋ! ಈಸ್ಕಿಲಸ್ ನಂತರ, ಹತ್ತೊಂಬತ್ತನೇ ಶತಮಾನದಲ್ಲಿ ಇಂಗ್ಲಿಷ್ ಕವಿ ಶೆಲ್ಲಿ ’ಪ್ರೊಮಿಥ್ಯೂಸ್ ಅನ್ಬೌಂಡ್’ ನಾಟಕ ಬರೆದ; ಅಲ್ಲಿ ಪ್ರೊಮಿಥ್ಯೂಸನ ಶಿಕ್ಷೆಯ ನಂತರ ಅವನು ಜ್ಯೂಪಿಟರನನ್ನು (ರೋಮನ್ ಸಂಸ್ಕೃತಿಯಲ್ಲಿ ಸ್ಯೂಸನೇ ಜೂಪಿಟರ್) ಕ್ಷಮಿಸುವ ಕತೆ ಇತ್ಯಾದಿ ಇದೆ.
ಈ ಟಿಪ್ಪಣಿ ಮುಗಿಸುತ್ತಿರುವಾಗ, ಎಷ್ಟೋ ದಶಕಗಳ ಕೆಳಗೇ ಕನ್ನಡದ ಹಿರಿಯ ವಿದ್ವಾಂಸರಾದ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಈಸ್ಕಿಲಸ್ಸಿನ ಮೂಲ ಗ್ರೀಕ್ ನಾಟಕವನ್ನು ಕನ್ನಡಿಸಿದ್ದರ ಬಗ್ಗೆ ಕೃತಜ್ಞತೆ ಹುಟ್ಟಿತು. ’ಕಟ್ಟಿ ಹಾಕಲ್ಪಟ್ಟ’ ಪ್ರೊಮಿಥ್ಯೂಸ್ ಹಾಗೂ ‘ಕಮಿಟೆಡ್’ ಪ್ರೊಮಿಥ್ಯೂಸ್ ಎರಡೂ ಅರ್ಥವನ್ನು ‘ಬದ್ಧ’ ಪ್ರೊಮಿಥ್ಯೂಸ್ ಹೆಸರು ಸೂಚಿಸುತ್ತದೆ ಎಂಬುದು ಈಗ ಹೊಳೆಯುತ್ತಿದೆ.
‘ತಡವಾಗಿ ಬಂದ ಬೆಳಕೇ!’ ಎಂದು ರಾಮಚಂದ್ರ ಶರ್ಮರ ಕವಿತೆಯ ಸಾಲು ಕೆಣಕುತ್ತಿದೆ!
Comments
19 Comments
| Suresha B
ಓದಿ ಖುಷಿಯಾಯಿತು... ಅಷ್ಟು ಸಾಕಲ್ಲವೇ ಜೀವಕ್ಕೆ...
| Suresha B
ಓದಿ ಖುಷಿಯಾಯಿತು. ಅಷ್ಟು ಸಾಕಲ್ಲವೆ ಜೀವಕ್ಕೆ....
| Venkatesh Murthy
ವೈಚಾರಿಕ ಚಿಂತನೆ ಹಾಗೂ ಪ್ರಜಾಪ್ರಭುತ್ವ ಚಿಂತನೆಯ ಮುಖ್ಯ ಆಶಯವೇ ಎಲ್ಲವನ್ನು ಎಲ್ಲರನ್ನೂ ಪ್ರಶ್ನಿಸುವುದು. ಸರ್ವಾಧಿಕಾರಿ ಯಜಮಾನ್ಯ ದೇವರನ್ನು ಕ್ರಿಸ್ತ ಪೂರ್ವದಲ್ಲಿ ದೇವರ ಬಗ್ಗೆ ಅಪಾರ ಭಕ್ತಿ ಭಯ ಇದ್ದ ಕಾಲದಲ್ಲಿ ಪ್ರಶ್ನಿಸಿದ್ದು ಅಪರೂಪದ ಚಿತ್ರಣ. ಪ್ರಶ್ನಿಸಬೇಕು ಎಂಬ ಈ ವೈಚಾರಿಕ ಚಿಂತನೆ ಬಸವಣ್ಣ, ಅದರಲ್ಲೂ ಮುಖ್ಯವಾಗಿ ದೇವರ ದಾಸಿಮಯ್ಯ, ಆನಂತರ ಶಲ್ಲಿ, ಮಾರ್ಕ್ಸ್, ಗಾಂಧೀಜಿ, ಹೆಚ್. ನರಸಿಂಹಯ್ಯ ನವವರವರೆಗೂ ವಿಸ್ತರಿಸಿದೆ... ಈ ಬಗೆಯ ವೈಚಾರಿಕ ವಿಚಾರಧರಾರೆಯಾನ್ನ ನಮಗೆ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ಧನ್ಯವಾದಗಳು
| Rajappa Dalavayi
ಲೇಖನ ಬದ್ದವಾಗಿಯೇ ಇದೆ. ಮಾಕ್ಸ್ ನ ನೆಚ್ಚಿನ ಪಾತ್ರ ಅದಾಗಿತ್ತು ಎಂಬ ವಿಷಯ ಓದಿ ಸಂತಸವಾಯಿತು.
| ಸೋಮಶೇಖರ್ ಕದಿರೇಹಳ್ಳಿ
ಲೇಖನ ಅರ್ಥಗರ್ಭಿತವಾಗಿದೆ ದುರಂತ ನಾಟಕಗಳಲ್ಲಿ ದೇವತೆಗಳು ಮನುಷ್ಯ ನ ಮೇಲೆ ಪ್ರಭಾವಿಸಿ ದುರಂತಕೊಳಪಡಿಸುತ್ತಾರೆ, ಇಲ್ಲಿ ದೇವತೆಗಳನ್ನು ಅವರ ಸರಿ ತಪ್ಪುಗಳನ್ನು ಯಾರು ಪ್ರಶ್ನಿಸುವಂತಿಲ್ಲ, ಇದಕ್ಕೆ ಅಪವಾದವೆನ್ನುವಂತೆ ಪ್ರೂಮಿಥೂಸ್ ಕಥೆ ವಿರುದ್ದವಾಗಿದೆ , ಹೇಗೆಂದರೆ ಪುಸ್ತಕದ ರಾಶಿಯೊಳಗೆ ಹೊಳಪಿಡುವ ಹಾಳೆಯೊಂದು ಕಣ್ಷಿಗೆ ರಾಚಿದಂತೆ, ಹಕ್ಕು ಗಳಿಗೆ ದಕ್ಕೆಯಾದಾಗ ಇರುವೆ ಕೂಡ ಪ್ರತಿಭಟಿಸುತ್ತದೆ, ಇದರ ದ್ಯೂತಕ ಪ್ರೂಮಿಥೂಸ್, ಗ್ರೀಕ್ ದುರಂತ ನಾಟಕದ ಚೌಕಟ್ಟನ್ನೆ ಪ್ರಶ್ನಿಸಿದಂತೆ ಇದೆ,
| Mahalingeshwar S.P. Parashuram
Insights are amazing. True literature and Literary criticism very often does this.. Commendable job your's. Thanks
| Nagesh Bidagalu
ಆಯಾಸ್ ಕೂಡ ದೇವರ ವಿರುದ್ಧ ಬಂಡಾಯವೆದ್ದವನೆ ಆದರೆ ಆ ನಾಟಕದಲ್ಲಿ ಆತ ಸ್ವಹತ್ಯೆ ಮಾಡಿಕೊಳ್ಳವ ಮೂಲಕ ನಾಟಕ ವಿಧಿವಾದವನ್ನು ಮಂಡಿಸುತ್ತದೆ. ಈ ನಾಟಕದ ಕೊನೆಯ ಭಾಗ ಸಿಕ್ಕಿಲ್ಲ ಎಂದಿರುವುದರಿಂದ ಅದು ಹೇಗಿತ್ತೋ? ಲೇಖನ ಚನ್ನಾಗಿದೆ... ಸರ್ ಧನ್ಯವಾದಗಳು
| Soma Shankara n
ಯಾವುದೇ ರೀತಿಯ ಧಾರ್ಮಿಕ, ರಾಜಕೀಯ ಅಥವಾ ಸಾಮಾಜಿಕ ಸರ್ವಾಧಿಕಾರವನ್ನು ಪ್ರಶ್ನಿಸುವ ಧೈರ್ಯವೇ ಸ್ವತಂತ್ರ ಚಿಂತನೆಯ ಮೂಲ. ಮಾನವ ಕಲ್ಯಾಣಕ್ಕಾಗಿ ಅನ್ಯಾಯದ ವಿರುದ್ಧ ನಿಲ್ಲುವವರೇ ಸಮಾಜದ ನಿಜವಾದ ಮಾರ್ಗದರ್ಶಕರು. ಪ್ರೊಮಿಥ್ಯೂಸ್ನ ಕಥೆ ನಮಗೆ ಸ್ವಾತಂತ್ರ್ಯ, ನ್ಯಾಯ ಮತ್ತು ವೈಚಾರಿಕತೆಯ ಮೌಲ್ಯವನ್ನು ನೆನಪಿಸುತ್ತದೆ ಎಂಬುದು ತಮ್ಮ ಈ ಲೇಖನದಿಂದ ಗೊತ್ತಾಯಿತು. ಇಂಥದ್ದೇ ಸವಾಲುಗಳಲ್ಲಿ ನಾನು ಸಿಲುಕಿದ್ದೇನೆ ಎಂಬ ಹೊಸ ಪ್ರಜ್ಞೆ ಮೂಡಿದಂತಾಯಿತು. ಧನ್ಯವಾದಗಳು ಸರ್..
| ಸೋಮಶಂಕರ ವಿ ಸುಣ್ಣಂಗೂರು
ಬದುಕಿನ ನವ ಚಿಂತನೆಗೆ ನಾಂದಿಯಾಗುವ ಪ್ರೊಮಿಥ್ಯೂಸ್ ಬೌಂಡ್’ ನಾಟಕದ ಅಪರೂಪದ ವಿನ್ಯಾಸ ಇಲ್ಲಿ ಕಾಣಬಹುದು. ಎಲ್ಲಾ ಕಾಲಘಟ್ಟಗಳ ಮುಖ್ಯ ಭೂಮಿಕೆ ಸಮಾಜೀವ ಮತ್ತು ವೈಚಾರಿಕ ಪ್ರಜ್ಞೆಯೇ ಆಗಿರುವುದರಿಂದ ವಿಧಿಯ ಕೈವಾಡ ವನ್ನು ಮೀರಿ ಬೆಳೆಯಬೇಕಾದ ಮಾರ್ಕ್ಸ್ ಪ್ರಜ್ಞೆಯು ರೋಮನ್ ದೇವರುಗಳನ್ನು ಪ್ರಶ್ನಿಸುವ ಪರಿಜ್ಞಾನ ಅವನಲ್ಲಿ ಮೂಡಿದಂತೆ ಜಗದಲ್ಲಿ ಮೂಡಿದರೆ ಬದಲಾವಣೆ ಮೂಡಬಹುದಾದ ಸಂಧಿಕಾಲವನ್ನು ಸೂಚಿಸುತ್ತದೆ.
| MAHANTA
Insightful Write up, Thank you, sir
| Jayashree C Kambar Kambar
Prometheus, not just a rebel but with strong democratical views ! A remarkable article , Sir
| Arundhati D
ಇಸ್ಕಿಲಸ್ ನ "ಪ್ರಾಮಿತ್ಯೂಸ್ ಬೌಂಡ್" ನಾಟಕ ,ಅದಕ್ಕೆ ಸರಿಯಾದ ಚೌಕಟ್ಟಿನಂತಿರುವ ನಿಮ್ಮ ಬರಹ , ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ, ವಂದನೆಗಳು
| Dr Padma T chinmaye
ಇಂಥ ಚಿಂತನೆಗಳು ಇಂದು ನಮ್ಮಲ್ಲಿ ಮಾಯವಾಗಿವೆ. ಈ ಲೇಖನ ಓದಿಯಾದರೂ ಜನ ಎಚ್ಚೆತ್ತುಕೊಳ್ಳಲಿ. ಇದೆ ಅಲ್ಲವೇ ಸಂವಿಧಾನ. ಮೊದಲೇ ನೀವು ವೈಚಾರಿಕ ಲೇಖಕರು. ಇಂತಹ ಲೇಖನಗಳು ಹೆಚ್ಚು ಹೆಚ್ಚು ಬರಲಿ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು
| Arundhati.D -
ಸುರರು (ದೇವರು) ಮಾನವನ ವಿರೋಧಿಗಳೇ ?
| ಗುರು ಜಗಳೂರು
ಇಲ್ಲಿಯೂ ದೇವರು ಮತ್ತು ಭಕ್ತರ ನಡುವೆ ಸಂವಾದ ಸಾಧ್ಯವೇನೋ.ಆದರೆ ಆ ದೇವರನ್ನೇ ಗರ್ಭಗುಡಿಯಲ್ಲಿ ಬಂದಿಯಾಗಿಸಿಯಾಗಿದೆ.ಬಯಲು ಆಲಯವಾಗಬೇಕಾದ ಜಾಗದಲ್ಲಿ ದೇವರನ್ನು ನೋಡಲು ಟೆಕೆಟ್ ನಿಗದಿ ಪಡಿಸಿದ್ದಾರೆ.ಇದು ಆದಾಯದ ಒಳಮರ್ಮ.ಅದಕ್ಕಾಗಿ VIP ,ಮಧ್ಯಮ, ಸಾಮಾನ್ಯ ಎಂಬ ವರ್ಗ ಬೇರೆ.ಅಷ್ಟರ ಮಟ್ಟಿಗೆ ಮಸೀದಿ,ಚರ್ಚ್ ಗಳೇ ವಾಸಿ. ಹಿಂದೂ ದೇವಾಲಯಗಳು ಅರ್ಥ ಕಳೆದುಕೊಂಡು ಬಹಳ ಕಾಲವಾಯಿತು.ಆಯೋಧ್ಯೆಯಲ್ಲಿ ಮಂದಿರ ಕಟ್ಟಿ ಬೀಗುತ್ತಿದ್ದವರು ಒಂದೆಡೆಯಾದರೆ ಅದರಲ್ಲಿ ಕಮಾಯಿಗಾಗಿ ಈ ಮುಂಚೆಯೇ ಹೊಂಚು ಹಾಕಿದ ಕಳ್ಳರು ಕಾಣದಂತೆ ಇರುತ್ತಾರೆ.ಇದು ಎಲ್ಲೆಡೆಯೂ ನಡೆಯುವ ಕೆಲಸ.ಎಷ್ಟು ದುಡ್ಡು ಜಾಸ್ತಿ ಬರುತ್ತದೆಯೋ ಅಷ್ಡು powerful ಆ ದೇವರು.ಮಂಗಳಾರತಿ ,ಊಟದ ಸದ್ದೇ ಜಾಸ್ತಿಯಾಗಿರುವ ಕಡೆ ವೈಚಾರಿಕತೆಗೆ ಜಾಗವುಂಟೇ? ಹಾಗೆಯೇ ದೇಶದ ನಾಯಕತ್ವ ಪ್ರಶ್ನಾತೀತವಾಗಬಾರದು.ಜನ ಸಾಕಪ್ಪ ಅನ್ನುವರೊಳಗೆ ತೆರೆಮರೆಗೆ ಸರಿಯಬೇಕು.ಇಂಗ್ಲೆಂಡ್ ನಾಯಕರನ್ನು ನೋಡಿ ಕಲಿಯಬೇಕಾಗಿದೆ
| Subramanyaswamy Swamy
ಸವಾಲು ಹಾಕುವ ಎದೆಗಾರಿಕೆ ಎರಡೂ ವರೆ ಸಾವಿರ ವರ್ಷಗಳಷ್ಟು ಹಿಂದೆ ಗಟ್ಟಿಯಾಗಿ ಪ್ರಕಟವಾದ ರೀತಿ ಒಂದು ಅಚ್ಚರಿಯ ಸಂಗತಿ ಆದರೆ ಈಸ್ಕಿಲಸ್ ಅದು ಇತ್ತಲ್ಲ !
| Divya
ನನ್ನ ಬದುಕಿನ ಹೋರಾಟಗಳನ್ನು ಹಿಂತಿರುಗಿ ನೋಡಿದರೆ ನಾನು ಕೂಡ ಯಾವುದೇ ಗ್ರೀಕ್ ದುರಂತ ನಾಯಕಿಗೆ ಕಡಿಮೆಯಿಲ್ಲ ಎನ್ನಿಸುತ್ತದೆ
| Dr. Suma
Even I love Prometheus. Too good this article is.
| Nataraj Huliyar Replies
Dr.Arundhati 'ಸುರರು (ದೇವರು) ಮಾನವನ ವಿರೋಧಿಗಳೇ?' Nataraj Huliyar Replies: ಗ್ರೀಕ್ ಮಾನವರು ದೇವತೆಗಳನ್ನು ತಮ್ಮಂತೆಯೇ ಅಸೂಯೆ, ಜಿದ್ದಿನ ವ್ಯಕ್ತಿಗಳಂತೆ, ಆದರೆ ಅಸಾಮಾನ್ಯ ಶಕ್ತಿವಂತರಂತೆ, ತಮ್ಮ ಪುರಾಣಗಳಲ್ಲಿ ಚಿತ್ರಿಸಿಕೊಂಡಿದ್ದಾರೆ. ಭಾರತೀಯ ಪುರಾಣಗಳಲ್ಲೂ ಸುರರು ವಿಧೇಯ ಮಾನವರನ್ನು ರಕ್ಷಿಸುವ ಪರಿ ಇದೆ. ದೇವತೆಗಳು ತಮ್ಮದೇ ಆದ ವರ್ಗವನ್ನು ರಕ್ಷಣೆ ಮಾಡಿಕೊಳ್ಳುವ ಪ್ರವೃತ್ತಿ ಭಾರತೀಯ ಪುರಾಣಗಳಲ್ಲೂ, ಗ್ರೀಕ್ ಪುರಾಣಗಳಲ್ಲೂ ಇದೆ.
Add Comment